ಕರೀಂನಗರ ಜಿಲ್ಲೆ ತೆಲಂಗಾಣದಲ್ಲಿ ವಾರಂಗಲ್ ವಿಭಾಗದ ಒಂದು ಜಿಲ್ಲೆ. ಉತ್ತರದಲ್ಲಿ ಆಂಧ್ರಪ್ರದೇಶದ ಆದಿಲಾಬಾದ್ ಮತ್ತು ಮಹಾರಾಷ್ಟ್ರದ ಚಾಂದ ಜಿಲ್ಲೆಗಳು, ಈಶಾನ್ಯದಲ್ಲಿ ಮಧ್ಯಪ್ರದೇಶದ ಬಸ್ತಾರ್ ಜಿಲ್ಲೆ, ಆಂಧ್ರಪ್ರದೇಶದ ಪುರ್ವ-ದಕ್ಷಿಣಗಳಲ್ಲಿ ವಾರಂಗಲ್ ಜಿಲ್ಲೆ, ನೈಋತ್ಯದಲ್ಲಿ ಮೇಡಕ್ ಜಿಲ್ಲೆ ಮತ್ತು ಪಶ್ಚಿಮದಲ್ಲಿ ನಿಜಾಮಾಬಾದ್ ಜಿಲ್ಲೆ ಇವೆ. == ವಿಸ್ತೀರ್ಣ ಮತ್ತು ಜನಸಂಖ್ಯೆ == ವಿಸ್ತೀರ್ಣ ೧೧,೮೨೩ ಚ.ಕಿಮೀ . ಜನಸಂಖ್ಯೆ ೩೭,೧೧,೭೨೮ (೨೦೧೧) ಜನಸಾಂದ್ರತೆ: ಚದರ ಕಿ.ಮೀ.ಗೆ ೩೨೨ ರೈತರೇ ಬಹುಸಂಖ್ಯಾತರು.ಲಿಂಗಾನುಪಾತ:೧೦೦೦ ಪುರುಷರಿಗೆ ೧೦೦೯ ಮಹಿಳೆಯರು. ಸಾಕ್ಷರತೆ:೬೪.೮೭ == ಮೇಲ್ಮೈ ಲಕ್ಷಣ == ಈ ಜಿಲ್ಲೆಯ ನೆಲ ಪುರ್ವದಿಂದ ಪಶ್ಚಿಮಕ್ಕೆ ಎತ್ತರವಾಗುತ್ತ ಸಾಗುತ್ತದೆ (135 ಮೀ. - 664 ಮೀ). ತಗ್ಗಿನಲ್ಲಿ ಪರ್ವತಗಳುಂಟು. ಇವುಗಳ ಪೈಕಿ ಒಂದು ಸಾಲು ಈಶಾನ್ಯದ ಕಡೆಗೆ ಹೊರಟು, ಗುರ್ರಪಲ್ಲಿ-ಜಗತಿಯಾಲ್‍ಗಳ ನಡುವೆ ಹಾಯ್ದು ಗೋದಾವರಿ ನದಿಯ ಬಳಿಯ ವೇಮಲಕುರ್ತಿ ಬಳಿ ಕೊನೆಗೊಳ್ಳುತ್ತದೆ. ಎರಡನೆಯದು ಇದಕ್ಕೆ ಸಮಾನಾಂತವಾಗಿ ಸುನಿಗ್ರಾಂನಿಂದ ಮಲ್ಲನ್ಗೂರ್ ಕಡೆಗೆ ಹಬ್ಬಿದೆ. ಮೂರನೆಯ ಸಾಲು ಮಾನೇರ್ ನದೀಕಣಿವೆಯ ಬಳಿ ನೈಋತ್ಯದಿಂದ ಈಶಾನ್ಯದ ಕಡೆ ಹೊರಟು, ಸುನಿಗ್ರಾಂ ಬೆಟ್ಟಗಳನ್ನು ಛೇದಿಸಿ, ರಾಂಗೀರನ್ನು ದಾಟಿ, ಗೋದಾವರಿನದಿಯ ಬಳಿ ಕೊನೆಗೊಳ್ಳುತ್ತದೆ. ಜಿಲ್ಲೆಯಲ್ಲಿ ರೂಪಾಂತರಗೊಂಡ ಶಿಲೆಗಳು ಹೆಚ್ಚಾಗಿವೆ. ಜಿಲ್ಲೆಯ ಹೆಚ್ಚು ಭಾಗವನ್ನು ಪ್ರಥಮ ಯುಗದ ನೈಸ್ಶಿಲೆ ಆಕ್ರಮಿಸಿದೆ. ಕಡಪ, ಸುಲ್ಲವಿ ಮತ್ತು ಗೊಂಡ್ವಾನ ರೀತಿಯ ಶಿಲಾ ನಿರ್ಮಾಣಗಳು ಪುರ್ವಭಾಗದಲ್ಲಿದೆ. ಉತ್ತರದಲ್ಲಿ ಕಪ್ಪು ಜಿಗುಟು ಮಣ್ಣು ಹೆಚ್ಚು. ಇದು ಜಿಲ್ಲೆಯ 1/3 ಭಾಗವನ್ನು ಆಕ್ರಮಿಸಿದೆ. ಉಳಿದ ಭಾಗಗಳಲ್ಲಿರುವುದು ಲವಣ ಮಿಶ್ರಿತ ಮರಳು. == ನದಿಗಳು == ಇಲ್ಲಿಯ ಮುಖ್ಯ ನದಿ ಗೋದಾವರಿ ಉತ್ತರದಲ್ಲಿ ಈ ಜಿಲ್ಲೆಯ ಗಡಿಯಂತೆ ಹರಿಯುತ್ತದೆ. ಗೋದಾವರಿಯ ಉಪನದಿಯಾದ ಮಾನೇರ್ ಇನ್ನೊಂದು ನದಿ ಪೆದ್ದವಾಗು ಮತ್ತು ಚಲ್ಲವಾಗು ಇವು ಗೋದಾವರಿಯ ಇತರ ಉಪನದಿಗಳು. == ಉಷ್ಣತೆ == ಉತ್ತರದಲ್ಲಿಯ ಜಗತಿಯಾಲ್, ಮಹದೇವಪುರ ಮತ್ತು ಪಶ್ಚಿಮದ ಸಿರಿಸಿಲ್ಲ ಪ್ರದೇಶಗಳ ವಿನಾ ಉಳಿದ ಭಾಗಗಳು ಆರೋಗ್ಯಕರವಾಗಿವೆ. ಸಮುದ್ರದಿಂದ ದೂರವಾಗಿ ಒಳನಾಡಿನಲ್ಲಿ ಇರುವುದರಿಂದ ಬೇಸಗೆಯಲ್ಲಿ ಉಷ್ಣತೆ ಹೆಚ್ಚು. ಕರೀಂನಗರ ಮತ್ತು ಜಮಿಕುಂಟಗಳಲ್ಲಿ ಮೇ ಮತ್ತು ಡಿಸೆಂಬರ್ ತಿಂಗಳುಗಳ ಉಷ್ಣತೆ ಕ್ರಮವಾಗಿ 43.3ಲಿ ಸೆ ಫ್ಯಾ, ಮತ್ತು 10ಲಿ ಸೆ ಫ್ಯಾ. == ಅರಣ್ಯ == ಪಶ್ಚಿಮಾರ್ಧದ ಸ್ವಲ್ಪ ಭಾಗದಲ್ಲಿ, ಜಿಲ್ಲೆಯ ಅಂಚಿನಲ್ಲಿ, ಒತ್ತಾದ ಕಾಡುಗಳೂ ಉತ್ತರದಲ್ಲಿ ಜಗತಿಯಾಲ್ಗೆ ಈಶಾನ್ಯದಲ್ಲಿ ತೆಳುವಾದ ಕಾಡುಗಳೂ ಇವೆ. ಇಲ್ಲಿಯ ಕಾಡುಗಳಲ್ಲಿ ಎಬೊನಿ ಮರಗಳು ಹೇರಳ, ತೇಗ, ಮಾವು, ಕರಿಮರಗಳೂ ಉಂಟು. ಈಚೆಗೆ ಅರಣ್ಯ ಕಡಿಮೆಯಾಗುತ್ತಿದೆ. == ವ್ಯವಸಾಯ == ತೆಲಂಗಾಣದಲ್ಲಿ ಇದು ಹೆಚ್ಚು ಬಾವಿಗಳಿರುವ ಜಿಲ್ಲೆ. ಅನೇಕ ಕೆರೆಗಳೂ ಉಂಟು. ಇವುಗಳ ಸಹಾಯದಿಂದ ಸು. 16,000 ಹೆಕ್ಟೇರುಗಳಷ್ಟು ಭೂಮಿ ನೀರಾವರಿಗೆ ಒಳಗಾಗಿದೆ. ಇಲ್ಲಿಯ ಮುಖ್ಯ ಬೆಳೆಗಳು ಬತ್ತ, ಜೋಳ, ಮೆಕ್ಕೆ ಜೋಳ ಮತ್ತು ಬೇಳೆಗಳು. ನದಿತೀರದುದ್ದಕ್ಕೂ ಬತ್ತ ಹೆಚ್ಚು; ಒಳಭಾಗಗಳಲ್ಲಿ ಜೋಳ ಹೆಚ್ಚು. ಗೋದಾವರಿಯ ಜಲಾನಯನ ಪ್ರದೇಶಕ್ಕೆ ಈ ಜಿಲ್ಲೆ ಒಳಪಟ್ಟಿದ್ದರೂ ನದಿಗಳಿಂದ ವ್ಯವಸಾಯಕ್ಕೆ ಹೆಚ್ಚು ಅನುಕೂಲ ಉಂಟಾಗಿಲ್ಲ. == ಕೈಗಾರಿಕೆಗಳು == ಗೋದಾವರಿಗೆ ಸಂಬಂಧಪಟ್ಟ ಹಾಗೆ ಮಂಥನಿ ಬಳಿ ರಾಮಗುಡಂ ವಿದ್ಯುತ್ ತಯಾರಿಕಾ ಯೋಜನೆಯನ್ನು ನಿರ್ಮಿಸಲಾಗಿದೆ. ಉತ್ತರದಲ್ಲಿ ತಾಮ್ರದ ಗಣಿಗಳಿವೆ ಈ ಜಿಲ್ಲೆಯಲ್ಲಿ ದೊಡ್ಡ ಕೈಗಾರಿಕೆಗಳಿಲ್ಲ. ಗ್ರಾಮ ಕೈಗಾರಿಕೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಬೆಳ್ಳಿಯ ಪದಾರ್ಥಗಳು, ಚರ್ಮದ ವಸ್ತು, ಚಾಕು ಚೂರಿ ಮುಂತಾದವನ್ನು ತಯಾರಿಸುವ ಉದ್ಯಮಗಳಿವೆ. == ಪಟ್ಟಣಗಳು == ಜಿಲ್ಲಾ ಕೇಂದ್ರವಾದ ಕರೀಂನಗರ ಮಾನೇರ್ ನದಿಯ ದಡದಲ್ಲಿದೆ. ಸರ್ಕಾರಿ ಕಚೇರಿಗಳೂ ಸಣ್ಣಪುಟ್ಟ ಕೈಗಾರಿಕೆಗಳೂ ಇಲ್ಲಿವೆ. ಜಗತಿಯಾಲ್, ಸಿರಿಸಿಲ್ಲ, ಕೊರಟ್ಲ, ಪೆದ್ದಪಲ್ಲೆ, ಮೆಟಪಲ್ಲೆ, ಮಂಥನಿ ಮತ್ತು ಮೇಮಲವಾಡ ಇವು ಜಿಲ್ಲೆಯ ಇತರ ಪಟ್ಟಣಗಳು ಮತ್ತು ತಾಲ್ಲೂಕು ಕೇಂದ್ರಗಳು == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == 2015-12-08 ವೇಬ್ಯಾಕ್ ಮೆಷಿನ್ ನಲ್ಲಿ. 2009-06-19 ವೇಬ್ಯಾಕ್ ಮೆಷಿನ್ ನಲ್ಲಿ.